ನಿಡ್ಪಳ್ಳಿಯಲ್ಲಿ ಕರಾಡ ಸಮಾಜದ 'ಉಬ್ಬಿರಾನ್ನು ಏಕು ದೀಸು' ಸಂಪನ್ನ
ಸಂಘಟನೆಯಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ: ಶ್ರೀಮತಿ ಮಾಲತಿ ನುಳಿಯಾಲು
ಸಂಘಟನೆಯಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ, ಈ ರೀತಿಯ ಆಯೋಜನೆಗಳು ಸಮುದಾಯದ ಪ್ರತಿಯೊಬ್ಬರನ್ನು ಒಗ್ಗೂಡಿಸಲು ಪೂರಕ ಎಂದು ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿನ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀಮತಿ ಮಾಲತಿ ನುಳಿಯಾಲು ಇವರು ಹೇಳಿದರು. ಇವರು ಕರಾಡ ಬ್ರಾಹ್ಮಣ ಸೇವಾ ಸಮಿತಿ (ರಿ.) ನಿಡಳ್ಳಿ ಪುತ್ತೂರು, ಕರಾಡ ಸೇವಾ ಸಮಿತಿ ಸುಳ್ಯಪದವು ಮತ್ತು ಕರಾಡ ಯುವ ವೇದಿಕೆ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕಜಮೂಲೆ ವೆಂಕಟೇಶಣ್ಣ, ದರ್ಭೆ ಫಾಟೆ ತಿರುಪತಿಣ್ಣ, ಮುಂಡೂರು ಮುರಳಿಣ್ಣ ಇವರುಗಳ ಸ್ಮರಣಾರ್ಥ ಕರಾಡ ಬ್ರಾಹ್ಮಣರ 'ಉಬ್ಬಿರಾನ್ನು ಏಕು ದೀಸು'(ಕೆಸರಿನಲ್ಲಿ ಒಂದು ದಿನ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರಾಡ ಬ್ರಾಹ್ಮಣ ಅಭ್ಯುದಯ ಸಂಘ(ರಿ.) ಅಗಲ್ಪಾಡಿ ಇದರ ಅಧ್ಯಕ್ಷರಾದ ಶ್ರೀ ರಮಾನಂದ ಎಡಮಲೆ ಇವರು ಮಾತನಾಡಿ, ಪ್ರಸ್ತುತ ನಮ್ಮ ಸಮುದಾಯದಲ್ಲಿ ಕ್ರಿಕೆಟ್, ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳ ಕ್ರೀಡಾಕೂಟಗಳು ನಡೆದಿವೆ, ಆದರೆ ಈ 'ಕೆಸರಿನಲ್ಲಿ ಒಂದು ದಿನ' ಕಾರ್ಯಕ್ರಮವು ನಮ್ಮ ಹೆಮ್ಮೆಯ ಕಿರೀಟಕ್ಕೆ ಮತ್ತೊಂದು ಮುತ್ತನ್ನು ಪೋಣಿಸುವಂಥದ್ದಾಗಿದೆ ಎಂದರು.
ಮತ್ತೋರ್ವ ಅತಿಥಿಗಳಾದ ಮಂಗಳೂರಿನ ಮೆಡಿಗ್ಲೋಬ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಚಂದ್ರಶೇಖರ ಭಟ್ ಬೀರಮೂಲೆ ಇವರು, ನಮ್ಮ ಬಾಲ್ಯದಲ್ಲಿ ಗದ್ದೆಗಳಲ್ಲಿ ಬೇಸಾಯ ಸರ್ವೇಸಾಮಾನ್ಯವಾಗಿತ್ತು. ಇಂದಿನ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳು ಹೊಸ ಅನುಭವವನ್ನು ಕೊಡಲಿದೆ ಎಂದು ಶುಭ ಹಾರೈಸಿದರು.
ಬಾಯಾರಿನ ಹೋಮಿಯೋಪಥಿ ವೈದ್ಯರಾದ ಡಾ. ಮನು ಕೆದುಕೋಡಿ ಇವರು ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ಗದ್ದೆಯ ಕೆಲಸಗಳು ಆರೋಗ್ಯಕ್ಕೆ ಪೂರಕವಾಗಿದೆ. ಮಳೆಗಾಲವಾದ ಕಾರಣ ಈ ಕಾರ್ಯಕ್ರಮದಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿಯೂ ಚಿಂತಿಸಬೇಕಾಗಿಲ್ಲ ಎಂದರು.
ಶಂಕರ ಸದನ ಕ್ರೀಡಾ ಸಮಿತಿ ಪೆರ್ಲ ಇದರ ಅಧ್ಯಕ್ಷರಾದ ಶ್ರೀ ವಿಘ್ನೇಶ್ ಶಿರಂತಡ್ಕ ಇವರು ಮಾತನಾಡಿ, ಯುವಕರಿಂದ ಪ್ರಪ್ರಥಮ ಬಾರಿಗೆ ಈ ರೀತಿಯ ಆಯೋಜನೆ ಪ್ರಶಂಸನೀಯವಾಗಿದ್ದು, ಆಯೋಜಕದ ಪರಿಶ್ರಮವು ಫಲಪ್ರದವಾಗಲಿ ಎಂದು ಆಶಿಸಿದರು. ಅಂತೆಯೇ, ಇನ್ನುಳಿದ ಅಥಿತಿಗಳೆಲ್ಲರೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಿಡ್ಪಳ್ಳಿಯ ಬುಳೇನಡ್ಕ ಗದ್ದೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರಾಡ ಬ್ರಾಹ್ಮಣ ಸೇವಾ ಸಮಿತಿ (ರಿ.) ನಿಡ್ಪಳ್ಳಿ, ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಬೀರಮೂಲೆ, ಪ್ರೆಸ್ಟೀಜ್ ಗ್ರೂಪ್ ಬೆಂಗಳೂರು ಇದರ ಸಹಾಯಕ ಮ್ಯಾನೇಜರ್ ಆದ ಶ್ರೀ ರವೀಶ್ ಸಿ. ಎಚ್, ಬಿಎಸ್ಎನ್ಎಲ್ ಮಂಗಳೂರು ಇದರ ನಿವೃತ್ತ ಅಧಿಕಾರಿಗಳಾದ ಶ್ರೀ ಶಿವಶಂಕರ ಭಟ್ ಕನ್ನಡ್ಕ, ಬಿಎಸ್ಎನ್ಎಲ್ ಕಾಸರಗೋಡು ಇದರ ನಿವೃತ್ತ ಅಧಿಕಾರಿಗಳಾದ ಶ್ರೀ ಮಧುಸೂದನ್ ಪಿ, ಕೆ ಪಿ ಟಿ ಸಿ ಎಲ್ ಲಿಂಗನಮಕ್ಕಿ ಇದರ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಆದ ಶ್ರೀ ದುರ್ಗಾಪ್ರಸಾದ್ ಡಿ, ಕರಾಡ ಯುವ ವೇದಿಕೆ ಇದರ ಕಾರ್ಯದರ್ಶಿಗಳಾದ ಶ್ರೀ ಪ್ರಜ್ವಲ್ ಘಾಟೆ, ಶ್ರೀಮತಿ ಶಾಲಿನಿ ಕಜಮೂಲೆ, ಶ್ರೀಮತಿ ಲಲಿತಾ ಭಟ್ ಘಾಟೆ, ಶ್ರೀ ಕೃಷ್ಣ ಕುಮಾರ್, ಮುಂಡೂರು ಇವರುಗಳು ವೇದಿಕೆಯಲ್ಲಿ ಉಪಸ್ಥಿತರದ್ದರು.
ಗದ್ದೆಗೆ ಬಾಗಿನ ಸಮರ್ಪಿಸುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಪುರುಷರ ವಿಭಾಗದಲ್ಲಿ ಗೂಟಓಟ, 100 ಮೀ ಓಟ, ಹಗ್ಗಜಗ್ಗಾಟ, ರಿಲೇ ಮತ್ತು ವಾಲಿಬಾಲ್ ಮಹಿಳೆಯರ ವಿಭಾಗದಲ್ಲಿ ಓಟ, ಸಂಗೀತ ಕುರ್ಚಿ, ಮೂರುಕಾಲಿನ ಓಟ, ಹಗ್ಗ ಜಗ್ಗಾಟ ಮತ್ತು ತ್ರೋಬಾಲ್ ಮಕ್ಕಳ ವಿಭಾಗದಲ್ಲಿ ಓಟ, ಹಾಳೆ ಎಳೆಯುವುದು, ಉಪ್ಪುಮೂಟೆ, ಮಡಕೆ ಒಡೆಯುವುದು ಮತ್ತು ಸಂಗೀತ ಕುರ್ಚಿ ಮತ್ತು ಎಲ್ಲಾ ವಿಭಾಗದವರಿಗೆ ನಿಧಿ ಶೋಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶ್ರೀ ಸುಧಾಕರ ಭಟ್ ಬಂಟಾಜೆ ಇವರು ಮಾತನಾಡಿ, ರೈತನ ಪರಿಶ್ರಮದ ಮಹತ್ವ ಅರಿತಾಗ ಮಾತ್ರ ರೈತನಿಗೆ ಗೌರವ ನೀಡಲು ಸಾಧ್ಯ. ಯುವ ಸಮುದಾಯದಿಂದ ಸಮಾಜಕ್ಕೆ ಹಲವಾರು ನಿರೀಕ್ಷೆಗಳಿವೆ, ಯುವ ಕರಾಡ ವೇದಿಕೆಯಿಂದ ಇಂತಹ ಕಾರ್ಯಕ್ರಮಗಳು ಮತ್ತಷ್ಟು ಬರಲಿ ಎಂದು ಆಶಿಸಿದರು.ಕರಾಡ ಬ್ರಾಹ್ಮಣ ಅಭ್ಯುದಯ ಸಂಘ(ರಿ.) ಅಗಲ್ಪಾಡಿ ಇದರ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಚೇರ್ಕೂಡ್ಲು ಇವರು, ನಮ್ಮ ಸಂಘ ಸಂಸ್ಥೆಗಳು ಕಳೆದ ಎರಡು ಮೂರು ದಶಕಗಳಿಂದ ಸಮುದಾಯವನ್ನು ಸಂಘಟಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಹಾಗೆಯೇ ಈ ಕಾರ್ಯಕ್ರಮವು ಹಲವಾರು ಅವಿಸ್ಮರಣೀಯ ಅನುಭವವನ್ನು ನೀಡಿದೆ ಎಂದರು.
ವೇದಿಕೆಯಲ್ಲಿ ಹಿರಿಯರಾದ ಶ್ರೀ ಸುಬ್ರಹ್ಮಣ್ಯ ಭಟ್ ಇಂದಾಜೆ, ಹೋಟೆಲ್ ಸಂತೃಪ್ತಿ ಪುತ್ತೂರು ಇದರ ಮಾಲೀಕರಾದ ಶ್ರೀ ಗಿರೀಶ್ ಚೋಕೆಮೂಲೆ, ಕರಾಡ ಬ್ರಾಹ್ಮಣ ಸೇವಾ ಸಮಿತಿ (ರಿ.) ನಿಡ್ಪಳ್ಳಿ, ಪುತ್ತೂರು ಇದರ ಕಾರ್ಯದರ್ಶಿಗಳಾದ ಶ್ರೀ ರಾಮಕೃಷ್ಣ ಭಟ್ ಚಂದುಕೂಡ್ಲು, ಶ್ರೀ ಶಂಕರ ಭಾರತಿ ಸೌಹಾರ್ದ ಸಹಕಾರಿ (ರಿ.) ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ನಾಗರಾಜ ಭಟ್ ಆರ್ತಿಕೂಡ್ಲು ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಘಟಕರಾದ ಶ್ರೀ ಕುಮಾರ ಸುಬ್ರಹ್ಮಣ್ಯ ಬುಳೇನಡ್ಕ, ಕೌಶಿಕ್ ಘಾಟೆ ಹಾಗೂ ಶ್ರೀ ಪ್ರಜ್ವಲ್ ಘಾಟೆ ಇವರುಗಳ ಸಂಘಟನಾ ಚಾತುರ್ಯಕ್ಕೆ ಸರ್ವರೂ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಮತಿ ಶ್ರುತಿ ಬುಳೇನಡ್ಕ ಹಾಗೂ ಶ್ರೀಮತಿ ವಿಜಯಶ್ರೀ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
0 ಕಾಮೆಂಟ್ಗಳು